ಅಪ್ಪನಿಗೆ ಆತಂಕ ತಂದ ಮಗಳ ಅಪಹರಣ. ಈ ವೃತ್ತಾಂತದ ಬಗ್ಗೆ ಅಪಹೃತಳ ಅಪ್ಪನಿಂದ ಚಿತ್ರದ ನಾಯಕನಿಗೆ ವಿವರಣೆ. ವಿಷಯ ತಿಳಿದ ನಾಯಕ ಅಪಹರಣಕಾರರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ. ಹುಡುಗಿಯನ್ನು ಕರೆ ತರುವ ವಿಷಯದಲ್ಲಿ ನಾಯಕ ಹಾಗೂ ಎದುರಾಳಿಗೆ ಮಾರಾಮಾರಿ. ಈ ಸನ್ನಿವೇಶವನ್ನು ವಿ.ವಿ.ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಚಿರಾಯು ಚಿತ್ರಕ್ಕಾಗಿ ನಿರ್ದೇಶಕ ಪ್ರಶಾಂತ್ ವಸಂತಪುರದ ಶ್ರೀವಲ್ಲಭರಾಯ ದೇವಸ್ಥಾನದ ಬಳಿ ಚಿತ್ರಿಸಿಕೊಂಡರು. ನಂಜುಂಡಿ ನಾಗರಾಜ್ ಸಾಹಸ ನಿರ್ದೇಶನ ಮಾಡಿದ ಈ ಸನ್ನಿವೇಶದಲ್ಲಿ ಪ್ರಶಾಂತ್, ಮೋಹನ್ ಜುನೇಜಾ, ಮುನಿ, ಮಮತಾ, ಶ್ರೀಕಾಂತ್, ಹೊನ್ನವಳ್ಳಿ ಕೆಂಪೇಗೌಡ ಮುಂತಾದವರು ಅಭಿನಯಿಸಿದ್ದರು.
ಒರಟ ಪ್ರಶಾಂತ್ ಎಂದೇ ಖ್ಯಾತರಾಗಿರುವ ನಟ ಪ್ರಶಾಂತ್ ಈಗ ತೆರೆಯ ಮೇಲೆ ನಾಯಕನಾಗಿ ಅಭಿನಯಿಸುವುದರ ಜೊತೆಗೆ ತೆರೆಯ ಹಿಂದೆಯೂ ತನ್ನ ಕೈಚಳಕ ತೋರಿಸ ಹೊರಟಿದ್ದಾರೆ. ನಿರ್ಮಾಪಕರೂ ಆಗಿದ್ದಾರೆ.
ಚಿತ್ರದಲ್ಲಿ ೬ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ಹೇಮಂತ್ ಸಾಹಿತ್ಯ ರಚಿಸಿದ್ದಾರೆ. ಈಗಾಗಲೇ ಹಾಡುಗಳ ಧ್ವನಿಮುದ್ರಣ ಕೂಡ ಪ್ರಾರಂಭವಾಗಿದೆ.
೫೦ದಿನಗಳ ಕಾಲ ಬೆಂಗಳೂರು, ಮಂಡ್ಯ ಹಾಗೂ ಕುಂದಾಪುರದ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ. ಜಿ.ಆರ್.ಶಂಕರ್ ಸಂಗೀತ ಸಂಯೋಜನೆ, ಸಿನಿಟೆಕ್ ಸೂರಿ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಆನಂದ್, ಮಹೇಶ್, ಅರವಿಂದ್, ಹೈಟ್ಮಂಜು ನೃತ್ಯ ನಿರ್ದೇಶನ ಈ ಚಿತ್ರಕ್ಕಿದ್ದು ಹಿರಿಯ ನಟ ರಾಮಕೃಷ್ಣ, ‘ಕೋಟೆ ರವಿಶಂಕರ್, ನೀನಾಸಂ ಆಶ್ವಥ್, ಮುನಿ, ಮೋಹನ್ ಜುನೇಜಾ, ಮಮತಾ, ಶ್ರೀಕಾಂತ್, ಹೊನ್ನವಳ್ಳಿ ಕೆಂಪೇಗೌಡ ತಾರಾಗಣದಲ್ಲಿದ್ದಾರೆ.